ವಿಷಯಕ್ಕೆ ಹೋಗು

ತಿಪಟೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Tiptur
ತಿಪಟೂರು
city
Coconut Plantation near Tiptur
Coconut Plantation near Tiptur
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆತುಮಕೂರು
Elevation
೮೬೨ m (೨,೮೨೮ ft)
Population
 (2011)
 • Total೫೯,೫೪೩[೧]
Languages
 • Officialಕನ್ನಡ
ಸಮಯ ವಲಯಯುಟಿಸಿ+5:30 (IST)
PIN
572201
ವಾಹನ ನೋಂದಣಿKA-44

ತಿಪಟೂರು ಭಾರತಕರ್ನಾಟಕ ರಾಜ್ಯದಲ್ಲಿರುವ ಒಂದು ನಗರ. ಇದು ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ. ಈ ನಗರವು ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆಯನ್ನು ಹೊಂದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ದೇಶವಾದ ಫಿಲಿಪೈಲ್ಸ್ ನಗರದ ಕೊಬ್ಬರಿಗಿಂತಲೂ ಈ ನಗರದಲ್ಲಿ ಬೆಳೆಯುವ ಕೊಬ್ಬರಿಗೆ ಬಾರಿ ಬೇಡಿಕೆ ಇದೆ ಇದಕ್ಕೆ ಕಾರಣ ಇಲ್ಲಿನ ಕೊಬ್ಬರಿಗಿರುವ ವಿಶೇಷ ರುಚಿ ಈ ನಗರವು ತೆಂಗಿನ ಬೆಳೆಗೆ ಬಹು ಪ್ರಸಿದ್ದಿ. ಇದು ೧೫೦ ಕಿ.ಮಿ. ದೂರದಲ್ಲಿದ್ದು ತನ್ನ ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೭೦ ಕಿ.ಮೀ, ಮತ್ತು ಹಾಸನದಿಂದ ೬೫ ಕಿ.ಮೀ,ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೨೦೬ (ಬೆಂಗರು-ಹೊನ್ನಾವರ) ಈ ನಗರದ ಮೂಲಕ ಹಾದು ಹೋಗಿದೆ. ಕೆಲವೊಮ್ಮೆ ತಿಪಟೂರಿನ ಸುತ್ತಮುತ್ತಲಿನ ಪ್ರದೇಶವನ್ನು ( ತುರುವೇಕೆರೆ ತಾ, ಚಿಕ್ಕನಾಯಕನಹಳ್ಳಿ ತಾ ಹಾಸನ ಜಿಲ್ಲೆಗೆ ಸೇರಿರುವ ಚನ್ನರಾಯ ಪಟ್ಟಣ ತಾ, ಅರಸೀಕೆರೆ ತಾ) ಕಲ್ಪತರು ನಾಡು ಎಂದು ಸಂಭೋದಿಸಲಾಗುತ್ತದೆ.

ಐತಿಹಾಸಿಕವಾಗಿ ಈ ಪಟ್ಟಣಕ್ಕೆ ತಿಪಟೂರು. ಹೆಸರು ಬರಲಿಕ್ಕೆ ಕಾರಣ ಇಲ್ಲಿನ ಅಣತಿ ದೂರದಲ್ಲಿರುವ ನೊಣವಿನಕೆರೆ ಕಲ್ಲೇಶ್ವರ ದೇಗುಲದಲ್ಲಿ ನೊಳಂಬ ರಾಜರಿಗೆ ಪಟ್ಟಕಟ್ಟಿದ್ದು. ಮೂರು ರಾಜರಿಗೆ ಪಟ್ಟಕಟ್ಟಿದ ತ್ರಿಪಟ್ಟದೂರು ಬರುಬರುತ್ತಾ ಜನರ ಬಾಯಲ್ಲಿ ತಿಪಟೂರು ಎಂದಾಗಿದೆ. ಇದು ಕೊಬ್ಬರಿಗೆ ಬಹು ಪ್ರಸಿದ್ದಿಯಾಗಿದೆ. ಇದಲ್ಲದೆ ತಿಪಟೂರು ಒಂದು ಪ್ರಮುಖ ಶೈಕ್ಷಣಿಕ ಕೇಂದ್ರ. ಇಲ್ಲಿರುವ ಕಲ್ಪತರು ವಿದ್ಯಾಸಂಸ್ಥೆ ಬಹಳ ಶೈಕ್ಷಣಿಕ ಕೇಂದ್ರಗಳನ್ನು ತೆರೆದಿದೆ. ಇದೇ ಸಂಸ್ಥೆಯು ಇಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜನ್ನು ಹೊಂದಿದೆ.

ತಿಪಟೂರಿಗೆ ಎರಡು ಕಿ.ಮೀ. ದೂರದಲ್ಲಿರುವ ಹಳೇಪಾಳ್ಯ ಗ್ರಾಮವು ನೇಕಾರಿಕೆಗೆ ಪ್ರಸಿದ್ಧಿಯಾಗಿದೆ.ಇಲ್ಲಿರುವ ಚೌಡೇಶ್ವರಿ ದೇವಾಲಯವು ಅತ್ಯಂತ ಸುಂದರವಾಗಿದ್ದು ಪ್ರತೀ ಶ್ರಾವಣ ಹುಣ್ಣಿಮೆಯಂದು ಇಲ್ಲಿ ಅಪರೂಪದ ಉತ್ಸವ ನಡೆಯುತ್ತದೆ. ಅಲ್ಲದೆ ಈ ಒಂದು ಚಿಕ್ಕ ಗ್ರಾಮದಲ್ಲೇ ಹತ್ತಕ್ಕೂ ಹೆಚ್ಚು ಸುಂದರ ದೇವಾಲಯಗಳಿದ್ದು ದೇವಾಲಯಗಳ ಗ್ರಾಮ ಎಂದೂ ಪ್ರಸಿದ್ಧವಾಗಿದೆ.ಇದೊಂದು ಪ್ರವಾಸದ ತಾಣ ಆಗಿದೆ.

ಭೂಗೋಳ[ಬದಲಾಯಿಸಿ]

ಪಶ್ಚಿಮದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳೂ ಪೂರ್ವದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ. ಗುಬ್ಬಿ ಮತ್ತು ತುರುವೇಕೆರೆ ತಾಲ್ಲೂಕುಗಳೂ ತಿಪಟೂರು ತಾಲ್ಲೂಕನ್ನು ಸುತ್ತುವರಿದಿವೆ. ತಾಲ್ಲೂಕಿನ ವಿಸ್ತೀರ್ಣ ೮೩೦.೧ ಚ.ಕಿ.ಮೀ. (೩೨೦.೫ ಚ. ಮೈ.) ; ಜನಸಂಖ್ಯೆ ೨,೨೨,೭೪೯ (೨೦೧೧)[೨] ತಿಪಟೂರು, ಕಿಬ್ಬನಹಳ್ಳಿ, ನೊಣವಿನಕೆರೆ, ಹೊನ್ನವಳ್ಳಿ- ಇವು ಈ ತಾಲ್ಲೂಕಿನ ಹೋಬಳಿಗಳು, ತಾಲ್ಲೂಕಿನಲ್ಲಿ ತಿಪಟೂರು ನಗರವೂ 216 ಗ್ರಾಮಗಳೂ ಇವೆ. ತಿಪಟೂರು ಸಮುದ್ರ ಮಟ್ಟದಿಂದ ೮೬೧ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೩° ೧೫' ಉ. ಹಾಗೂ ೭೬° ೨೮' ಪೂ. ಅಕ್ಷಾ೦ಶದಲ್ಲಿದೆ.

ಮೇಲ್ಮೈ ಲಕ್ಷಣಗಳು[ಬದಲಾಯಿಸಿ]

ತಿಪಟೂರು ತಾಲ್ಲೂಕಿನಲ್ಲಿ ಒಟ್ಟಿನಲ್ಲಿ ಅಲೆಯಲೆಯಾಗಿ ಏರಿಳಿಯುವ ಪ್ರಸ್ಥಭೂಮಿ ಪ್ರದೇಶ. ಆದರೆ ಉತ್ತರಲ್ಲಿ ಬಂಡೆಗಳಿಂದ ಕೂಡಿದ ಬೋಳು ಕೋಡುಗಳ ಬೆಟ್ಟಗಳಿವೆ. ಕೃಷ್ಣಾ ಮತ್ತು ಕಾವೇರಿ ನದೀ ವ್ಯವಸ್ಥೆಗಳನ್ನು ಬೇರ್ಪಡಿಸುವ ಜಲವಿಭಾಗ ರೇಖೆ ಈ ತಾಲ್ಲೂಕಿನ ಮೂಲಕ ಪೂರ್ವಪಶ್ಚಿಮವಾಗಿ ಸಾಗುತ್ತದೆ. ತಾಲ್ಲೂಕಿನ ಉನ್ನತ ಶಿಖರಗಳು ಎರಡು. ಬೊಮ್ಮನಹಳ್ಳಿ ಶಿಖರದ ಎತ್ತರ ಸಮುದ್ರಮಟ್ಟದಿಂದ ೩,೧೨೫ ಅಡಿ; ಚೌಡನಹಳ್ಳಿ ಶಿಖರದ ಎತ್ತರ ೨,೬೬೫ ಅಡಿ. ತಾಲ್ಲೂಕಿನ ಉಲ್ಲೇಖಾರ್ಹವಾದ ನದಿಗಳಾಗಲಿ ಹೊಳೆಗಳಾಗಲಿ ಇಲ್ಲ. ಆದರೆ ಕೆರೆಗಳ ನಿರ್ಮಾಣಕ್ಕೆ ಇಲ್ಲಿಯ ನೆಲ ಬಹಳ ಅನುಕೂಲವಾಗಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ೬೧೫.೨ ಮಿ.ಮೀ. ಇಲ್ಲಿಯ ನೈಸರ್ಗಿಕ ಸಸ್ಯ ಸಂಪತ್ತು ಬಹಳ ಅಲ್ಪ. ಕುರುಚಲು ಕಾಡುಗಳು ಅಲ್ಲಲ್ಲಿ ಇವೆ. ತಾಲ್ಲೂಕಿನಲ್ಲಿ ಕಪ್ಪು. ಕಂದು ಮತ್ತು ಕೆಂಪು ಮಣ್ಣುಗಳಿವೆ. ಕಪ್ಪು ಮಣ್ಣಿನ ನೆಲ ಬಲು ಕಡಿಮೆ. ಅದಕ್ಕೆ ವ್ಯವಸಾಯದ ದೃಷ್ಟಿಯಿಂದ ಅಷ್ಟೇನೂ ಪ್ರಾಮುಖ್ಯವಿಲ್ಲ. ಮರಳು ಮಿಶ್ರಿತ ಕೆಂಪು ಮಣ್ಣು ನೆಲವೇ ಸಾಮಾನ್ಯ. ತಾಲ್ಲೂಕಿನ ಉತ್ತರ ಭಾಗದ ಮಣ್ಣು ಅಷ್ಟೇನೂ ಫಲವತ್ತಾದ್ದಲ್ಲ. ಅದರಲ್ಲಿ ನೊರಜುಗಲ್ಲು ಮಿಶ್ರವಾಗಿದೆ. ತಾಲ್ಲೂಕಿನ ಮಧ್ಯ ಮತ್ತು ದಕ್ಷಿಣ ಭಾಗಗಳ ಎತ್ತರದ ಪ್ರದೇಶಗಳಲ್ಲಿ ಕೆಂಪು ಮಣ್ಣೂ ತಗ್ಗಿನ ಪ್ರದೇಶಗಳಲ್ಲಿ ಕಪ್ಪು ಕಂದು ಮಣ್ಣೂ ಇವೆ. ಒಟ್ಟಿನಲ್ಲಿ ತಾಲ್ಲೂಕಿನಲ್ಲಿ ೧,೦೦,೦೬೦ ಎಕರೆ ನೆಲ ಕೆಂಪು ಮಣ್ಣಿನಿಂದ ಕೂಡಿದ್ದು. ೨೫,೦೦೦ ಎಕರೆಗಳಲ್ಲಿ ದಪ್ಪ ಮರಳು ಮತ್ತು ಸಣ್ಣ ಕಲ್ಲುಮಿಶ್ರಿತ ಮಣ್ಣಿದೆ. ೨,೫೦೦ ಎಕರೆ ಕಪ್ಪು ಮಣ್ಣಿನ ನೆಲ, ೩೯,೫೦೦ ಎಕರೆಗಳಲ್ಲಿ ಮರಳು ಮಿಶ್ರಿತ ಜೇಡಿ ಮಣ್ಣಿದೆ. ೨೨,೦೦೦ ಎಕರೆ ನೆಲ ಜೇಡಿ ಮಣ್ಣಿನದು.

ಕೃಷಿ ಮತ್ತು ವಾಣಿಜ್ಯ[ಬದಲಾಯಿಸಿ]

ತಿಪಟೂರು, ತೆಂಗು ಮತ್ತು ಕೊಬ್ಬರಿಗೆ ಹೆಸರು ವಾಸಿಯಾದ ಊರು,ಇಲ್ಲಿ ಬಹು ದೊಡ್ಡದಾದ ಕೊಬ್ಬರಿ ಮಾರುಕಟ್ಟೆಯಿದೆ. ಸುತ್ತಮುತ್ತಲಿನ ತಾಲೂಕಿನ ಜನರು ಕೂಡ ಇಲ್ಲಿಗೆ ತಾವು ಬೆಳೆದ ಕೊಬ್ಬರಿಯನ್ನು ಇಲ್ಲಿಗೆ ತಂದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ಶನಿವಾರ ಮತ್ತು ಬುಧವಾರ ಹರಾಜು ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ತಾಲೂಕಿನ ಪ್ರಮುಖ ಊರುಗಳು ನೊಣವಿನಕೆರೆ, ಬೆಳಗರಹಳ್ಳಿ, ಆಲ್ಬೂರು, ಬಿಳಿಗೆರೆ, ಈಚನೂರು, ಬಜಗೂರು, ಹುಣಸೇಘಟ್ಟ, ದಸರೀಘಟ್ಟ, ಬಿದರೆಗುಡಿ, ಗೌಡನಕಟ್ಟೆ, ಚಿಕ್ಕಬಿದರೆ, ಹರಿಸಮುದ್ರ ಮಜರೆ ಗ್ರಾಮ ಮಾಚಕಟ್ಟೆ ಲಂಬಾಣಿ ತಾಂಡ್ಯ, ಸಾರ್ಥವಳ್ಳಿ, ಆಲೂರು, ಗೆದ್ಲೆಹಳ್ಳಿ, ಭೈರನಾಯಕನಹಳ್ಳಿ ಮುಂತಾದ ತಾಲ್ಲೂಕಿನ ಒಟ್ಟು ನೆಲದಲ್ಲಿ ೧೯೬೫-೬೬ ರಲ್ಲಿ ೧,೧೦,೫೬೨ ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿತ್ತು. ೧,೪೭೦ ಎಕರೆ ಅರಣ್ಯಪ್ರದೇಶ, ೩೦,೧೭೮ ಎಕರೆ ಹುಲ್ಲುಗಾವಲು ಮತ್ತು ೩,೩೨೦ ಎಕರೆ ವ್ಯವಸಾಯಯೋಗ್ಯ ಬೀಳು ನೆಲ. ನೀರಾವರಿ ಸೌಲಭ್ಯ ಪಡೆದ ಜಮೀನಿನ ವಿಸ್ತೀರ್ಣ ೫,೬೮೫ ಎಕರೆ (೧೯೬೫-೬೬) ಇದರಲ್ಲಿ ಕೆರೆಯ ಕೆಳಗಿನ ನೆಲ ೫.೫೦೦ ಎಕರೆ. ೧೮೫ ಎಕರೆಗಳಿಗೆ ಬಾವಿಗಳಿಂದ ನೀರು ಒದಗುತ್ತಿತ್ತು. ತಾಲ್ಲೂಕಿನಲ್ಲಿ ೧೯೬೫-೬೬ ರಲ್ಲಿ ನೀರಾವರಿಗೆ ಒದಗಿದ ೧೫೩ ಕೆರೆಗಳೂ ೩೨೦ ಬಾವಿಗಳೂ ಇದ್ದುವು. ರಾಗಿ, ಬತ್ತ, ನವಣೆ, ಹುರುಳಿ, ಸೇಂಗಾ, ತೊಗರಿ ಇಲ್ಲಿಯ ಮುಖ್ಯ ಬೆಳೆಗಳು. ಕೆಲವು ಕಡೆಗಳಲ್ಲಿ ಹತ್ತಿ ಬೆಳೆಯುತ್ತಾರೆ. ತಿಪಟೂರು ತಾಲ್ಲೂಕು ತೆಂಗಿನ ಬೆಳೆಗೆ ಬಹಳ ಪ್ರಸಿದ್ಧವಾದ್ದು. ಹೊನ್ನವಳ್ಳಿಯ ಬಳಿ ಬೆಳೆಯುವ ತೆಂಗು ಅತ್ಯುತ್ತಮವಾದ್ದೆಂದು ಪರಿಗಣಿತವಾಗಿದೆ. ತಾಲ್ಲೂಕಿನ ಅನೇಕ ಕಡೆಗಳಲ್ಲಿ ತೆಂಗಿನ ತೋಟಗಳಿವೆ. ತಾಲ್ಲೂಕಿನಲ್ಲಿ ವ್ಯವಸಾಯದ ಜೊತೆಗೆ ಪಶುಪಾಲನೆಯೂ ಉಂಟು. ತಿಪಟೂರು, ನೊಣವಿನಕೆರೆ ಮತ್ತು ಬೆಳಿಗೆರೆಯಲ್ಲಿ ಪಶುವೈದ್ಯ ಶಾಲೆಗಳಿವೆ.

ಕೊಬ್ಬರಿ ಎಣ್ಣೆ, ಮರಕೊಯ್ಯುವುದು, ಮರಗೆಲಸ, ಕಬ್ಬಿಣ ಕೆಲಸ, ಬೆಂಕಿಕಡ್ಡಿ ಮತ್ತು ಸಾಬೂನು ತಯಾರಿಕೆ- ಇವು ತಾಲ್ಲೂಕಿನ ಮುಖ್ಯ ಕೈಗಾರಿಕೆಗಳು, ರೇಷ್ಮೆ, ಹತ್ತಿ ಮತ್ತು ಉಣ್ಣೆ ಬಟ್ಟೆಗಳನ್ನು ನೇಯುತ್ತಾರೆ. ನೇಯ್ಗೆಯ ಮತ್ತು ತೆಂಗಿನ ನಾರಿನ ಉದ್ಯಮದ ಸಹಕಾರ ಸಂಘಗಳುಂಟು.

ಸಂಪರ್ಕ[ಬದಲಾಯಿಸಿ]

ಬೆಂಗಳೂರು-ಅರಸೀಕೆರೆ ಮೀಟರ್ ಗೇಜ್ ರೈಲುಮಾರ್ಗವೂ ಬೆಂಗಳೂರು-ಶಿವಮೊಗ್ಗ ಹೆದ್ದರಿಯೂ ತಿಪಟೂರಿನ ಮೂಲಕ ಹೋಗುತ್ತವೆ. ತಿಪಟೂರು ನಗರ ಒಂದು ಸಂದಿಸ್ಥಳ. ತಿಪಟೂರಿನಿಂದ ನೈಋತ್ಯಾಭಿಮುಖವಾಗಿ ಲಿಂಗದಹಳ್ಳಿಯ ಮೂಲಕ ಹಾಸನಕ್ಕೂ ದಕ್ಷಿಣಾಭಿಮುಖವಾಗಿ ನುಗ್ಗಿಹಳ್ಳಿಯ ಮೂಲಕ ಚನ್ನರಾಯಪಟ್ಟಣಕ್ಕೂ ಆಗ್ನೇಯದ ಕಡೆಗೆ ನೊಣವಿನಕೆರೆಯ ಮೂಲಕ ತುರುವೇಕೆರೆಗೂ ರಸ್ತೆಗಳಿವೆ. ತಿಪಟೂರು-ತುರುವೇಕೆರೆ ರಸ್ತೆ ಮಾಯಸಂದ್ರಕ್ಕೆ ಮುಂದುವರಿದು ಸಿರಾ-ಶ್ರೀರಂಗಪಟ್ಟಣ ರಸ್ತೆಯನ್ನು ಸಂಧಿಸುತ್ತದೆ. ಕೊನೆಹಳ್ಳಿ ರೈಲುನಿಲ್ದಾಣದಿಂದ ಹೊನ್ನವಳ್ಳಿಗೆ ರಸ್ತೆಯಿದೆ. ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮಗಳಿಗೂ ರಸ್ತೆಗಳಿವೆ.

ಪ್ರವಾಸ[ಬದಲಾಯಿಸಿ]

ತಿಪಟೂರಿನ ಬಳಿಯಿರುವ ಕೆರೆಗೋಡಿ-ರಂಗಾಪುರ ಸುಕ್ಷೇತ್ರವು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದ್ದು ಲಕ್ಷಾಂತರ ಭಕ್ತರು ಇಲ್ಲಿನ ಶ್ರೀ ಶಂಕರೇಶ್ವರ ಸ್ವಾಮಿ ದೇವಾಲಯ ಹಾಗು ರಂಗಾಪುರದ ಪರದೇಶೀಕೇಂದ್ರ ಮಠಕ್ಕೆ ಬಂದು ಹೋಗುತ್ತಾರೆ. ಮುನಿಯಪ್ಪನ ಆಲದಮರ ಮತ್ತೊ೦ದು ಪ್ರೇಕ್ಷಣೀಯ ಸ್ಥಳ. ಇಲ್ಲಿ ಬಹು ದೊಡ್ದದಾದ ಆಲದ ಮರವಿದೆ.ಇದರ ಬುಡದಲ್ಲಿ ಮುನೆಶ್ವರರು ತಪಸ್ಸು ಆಚರಿಸಿದರೇ೦ದು ಪ್ರತೀತಿ.ವರ್ಷ್ಹಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಬಹಳ ಪ್ರಸಿದ್ದಿ.ಇಲ್ಲಿ ನಡೆಯುವ ಜಾತ್ರೆಯಲ್ಲಿ ದನಗಳ ಜಾತ್ರೆ ವಿಶೇಶವಾದದ್ದು.

ತಿಪಟೂರಿನಿಂದ ೧೨ ಕಿ.ಮೀ ದೂರವಿರುವ ದಸರಿಘಟ್ಟ ಸುಕ್ಷೇತ್ರದ ಚೌಡೇಶ್ವರಿ ದೇವಾಲಯವು ಬಹಳ ಪ್ರಖ್ಯಾತಿ ಪಡೆದಿದ್ದು, ದೂರ ಸ್ಥಳಗಳಿಂದ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ತಿಪಟೂರಿಗೆ ೧೫ ಕಿಲೋಮೀಟರ್ ದೂರದಲ್ಲಿರುವ ಅರಳಗುಪ್ಪೆ ಗ್ರಾಮದಲ್ಲಿರುವ ಕಲ್ಲೇಶ್ವರ ದೇವಾಲಯ ಮತ್ತೂ೦ದು ವಿಶೇಷ.ಈ ದೇವಾಲಯವು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ.

ತಿಪಟೂರಿಗೆ ಐದು ಕಿ.ಮೀ. ದೂರದಲ್ಲಿ ಈಚನೂರು ಕೆರೆ ಇದ್ದು, ಬೃಹತ್ ಆಗಿ ಸುಂದರವಾಗಿದೆ. ಅಲ್ಲಲ್ಲಿ ಓಡಾಡುವ, ಹಾರಾಡುವ ಸುಂದರ ನವಿಲುಗಳ ಇಲ್ಲಿ ಲಭ್ಯವಾಗುತ್ತದೆ.

ತಿಪಟೂರಿನಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿರುವ ಬೆನ್ನಾಯಕನ ಹಳ್ಳಿಯಲ್ಲಿ ಪುರಾತನ ಕಾಲದ ಶ್ರೀ ತ್ರಿಲಿಂಗೇಶ್ವರ ದೇವಾಲಯವಿದೆ. ಹಾಗೂ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿಯವರ ದೇವಾಲಯವು ಪ್ರಖ್ಯಾತಿ ಪಡೆದಿದ್ದು, ಈ ದೇವಾಲಯವು ಏಳು ಹಳ್ಳಿ ಗ್ರಾಮಕ್ಕೆ ಸೇರಿದ್ದುದಾಗಿದೆ, ಸುತ್ತಮುತ್ತಲಿನ ಗ್ರಾಮದ ಜನರು ಮತ್ತು ರಾಜ್ಯಾದ್ಯಂತ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಪ್ರತಿವರ್ಷ ಯುಗಾದಿ ನಂತರದಲ್ಲಿ ಐದು ದಿನಗಳ ಕಾಲ ಅಮ್ಮನವರ ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುತ್ತದೆ.

ಸೌಲಭ್ಯಗಳು[ಬದಲಾಯಿಸಿ]

ಇತರ ತಾಲ್ಲೂಕುಗಳಂತೆ ಇಲ್ಲಯೂ ವಿದ್ಯುತ್ತು, ಅಂಚೆ ತಂತಿ ಸೌಲಭ್ಯಗಳೂ ಶಾಲೆ ಕಾಲೇಜು ಆಸ್ಪತ್ರೆಗಳೂ ಆರೋಗ್ಯ ಕೇಂದ್ರಗಳೂ ಇವೆ.

ಐತಿಹಾಸಿಕ ಸ್ಥಳಗಳು[ಬದಲಾಯಿಸಿ]

ಈ ತಾಲ್ಲೂಕಿನ ಅಲಬೂರಿನಲ್ಲಿರುವ ಶಿಲಾಶಾಸನಗಳು ಸುಂದರ ಕೆತ್ತನೆಯಿಂದ ಕೂಡಿದವು. ಹೊನ್ನವಳ್ಳಿಯಲ್ಲಿ ಚೋಳರ ಕಾಲದ್ದೆಂದು ಹೇಳಲಾದ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯವಿದೆ. ತಿಪಟೂರಿನಿಂದ ೫ ಕಿಮೀ. ದೂರದಲ್ಲಿರುವ ಕೆರೆಗೋಡಿಯಲ್ಲಿರುವ ದೇವಾಲಯ ಶಂಕರೇಶ್ವರನದು. ದೇವಾಲಯ ಪ್ರದೇಶದಲ್ಲಿ ಕಪ್ಪು ಕಲ್ಲಿನಲ್ಲಿ ಕಡೆದ ಎರಡು ಸಿಂಹಗಳ ವಿಗ್ರಹಗಳುಂಟು. ದೇವಾಲಯದ ಒಳಗೆ ಬುದ್ಧ, ವಿಘ್ನೇಶ್ವರ, ನಂದಿಯ ವಿಗ್ರಹಗಳಿವೆ. ಇಲ್ಲಿ ಒಂದು ವೀರಶೈವ ಮಠವಿದೆ. ತಿಪಟೂರಿನ ಆಗ್ನೇಯಕ್ಕೆ ೧೬ ಕಿಮೀ. ದೂರದಲ್ಲಿರುವ ನೊಣವಿನಕೆರೆಯಲ್ಲಿರುವ ಪ್ರಾಚೀನ ದೇವಾಲಯಗಳ ಪೈಕಿ ಬೇಟೆರಾಯ, ಗೋಪಾಲಕೃಷ್ಣ, ಶಾಂತೇಶ್ವರ, ನೊಣಬೇಶ್ವರ, ಚಂದೇಶ್ವರ, ಕಲ್ಲೇಶ್ವರ ಮತ್ತು ಗೌರೀಶ್ವರ ದೇವಾಲಯಗಳು ಮುಖ್ಯವಾದವು. ತಿಪಟೂರಿನ ದಕ್ಷಿಣಕ್ಕೆ ೫ ಕಿಮೀ. ದೂರದಲ್ಲಿರುವ ರಂಗಪುರದಲ್ಲಿರುವ ರಂಗನಾಥ ದೇವಾಲಯ ೨೫೦ ವರ್ಷಗಳಷ್ಟು ಹಿಂದಿನದು. ವಿಘ್ನಸಂತೆಯಲ್ಲಿ ಹೊಯ್ಸಳ ಶೈಲಿಯ ಲಕ್ಷ್ಮೀನರಸಿಂಹ ದೇವಾಲಯವಿದೆ. ಇದು ೧೨೮೬ ರಲ್ಲಿ ಹೊಯ್ಸಳ ದೊರೆ ೩ ನೆಯ ನರಸಿಂಹನ ಕಾಲದಲ್ಲಿ ಕಟ್ಟಿದ್ದೆಂದು ಹೇಳಲಾಗಿದೆ. ಇಲ್ಲಿ ಬಾಲಲಿಂಗೇಶ್ವರ ಮತ್ತು ಬನಶಂಕರಿ ದೇವಾಲಯಗಳೂ ಇವೆ.

ಆಡಳಿತ[ಬದಲಾಯಿಸಿ]

ತಿಪಟೂರು ಉಪವಿಭಾಗದಲ್ಲಿ ತಿಪಟೂರು ಅಲ್ಲದೆ ಚಿಕ್ಕನಾಯಕನಹಳ್ಳಿ (ನೋಡಿ- ಚಿಕ್ಕನಾಯಕನಹಳ್ಳಿ) ಮತ್ತು ತುರುವೇಕೆರೆ (ನೋಡಿ- ತುರುವೇಕೆರೆ) ತಾಲ್ಲೂಕುಗಳಿವೆ. ಉಪವಿಭಾಗದ ಒಟ್ಟು ವಿಸ್ತೀರ್ಣ ೨,೬೮೫.೬ ಚ.ಕಿಮೀ. ಜನಸಂಖ್ಯೆ ೪,೧೨,೦೮೧ (೧೯೭೧).

ನಗರ[ಬದಲಾಯಿಸಿ]

ತಿಪಟೂರು ನಗರ ತುಮಕೂರಿಗೆ ಪಶ್ಚಿಮದಲ್ಲಿ ೭೩.೬ ಕಿಮೀ. ದೂರದಲ್ಲಿ, ಉ.ಅ.೧೩o ೧೫' ಮತ್ತು ಪೂ.ರೇ, ೭೬o೩೨ ' ಮೇಲೆ, ಬೆಂಗಳೂರು - ಅರಸೀಕೆರೆ ರೈಲುಮಾರ್ಗದಲ್ಲಿ, ಸಮುದ್ರಮಟ್ಟದಿಂದ ೨,೭೮೩ ಅಡಿ ಎತ್ತರದಲ್ಲಿ ಇದೆ. ಜನ ಸಂಖ್ಯೆ ೫೯,೫೪೨ (೨೦೧೧)[೧]. ತುಮಕೂರು ಜಿಲ್ಲೆಯಲ್ಲಿ ಇದು ಎರಡನೆಯ ದೊಡ್ಡ ನಗರ. ಮೊದಲನೆಯದು ತುಮಕೂರು, ಹಲವು ರಸ್ತೆಗಳು ಇಲ್ಲಿ ಸಂಧಿಸುತ್ತವೆ. ಶ್ರಿ ಕೃಷ್ಣರಾಜೆಂದ್ರ ಮತ್ತು ಗಾಂಧಿನಗರ ಬಡಾವಣೆಗಳಿದ ಕೂಡಿ ಬೆಳೆಯುತ್ತಿರುವ ತಿಪಟೂರು ಒಂದು ಮುಖ್ಯ ವ್ಯಾಪಾರಸ್ಥಳ. ತೆಂಗು ಮತ್ತು ಕೊಬ್ಬರಿ ಇಲ್ಲಿ ಮಾರಾಟವಾಗುವ ಮುಖ್ಯ ಸರಕುಗಳು. ಮುಂಬಯಿ, ದೆಹಲಿ, ಕಾನ್ಪುರ, ಮುಂತಾದ ದೂರದ ವ್ಯಾಪಾರದ ಕೇಂದ್ರಗಳಿಗೆ ಕೊಬ್ಬರಿ ಮಾರಾಟವಾಗುತ್ತದೆ. ಪ್ರತಿ ಶನಿವಾರ ಇಲ್ಲಿ ಸಂತೆ ನೆರೆಯುತ್ತದೆ. ಇಲ್ಲಿ ಒಂದು ನಗರಸಭೆ ಉಂಟು. ಅನೇಕ ಶಾಲೆಗಳೂ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದು ಈಗ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿರುವ ಕಲ್ಪತರು ಕಾಲೇಜೂ ಇವೆ. ವಿದ್ಯುತ್ತು, ಅಂಚೆ, ತಂತಿ, ದೂರವಾಣಿ, ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯಶಾಲೆ ಮುಂತಾದ ಸೌಲಭ್ಯಗಳುಂಟು.ನಗರಕ್ಕೆ ಸುರಕ್ಷಿತ ನೀರಿನ ಸರಬರಾಜಾಗುತ್ತದೆ. ಕೊಬ್ಬರಿ ಎಣ್ಣೆಯ ಮತ್ತು ಮರ ಕೊಯ್ಯುವ ಕಾರ್ಖಾನೆಗಳಿವೆ. ವಾಣಿಜ್ಯ ಬ್ಯಾಂಕುಗಳುಂಟು. ಇಲ್ಲಿರುವ ದೇವಾಲಯಗಳಲ್ಲಿ ಕಲ್ಲೇಶ್ವರ, ತಿಪಟೂರಮ್ಮ, ಆಂಜನೇಯಸ್ವಾಮಿ, ಮಲ್ಲಿಕಾರ್ಜುನ ಕಾಶಿವಿಶ್ವೇಶ್ವರ ಮತ್ತು ಕನ್ಯಕಾಪರಮೇಶ್ವರಿ ದೇವಾಲಯಗಳು ಪ್ರಮುಖವಾದವು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "ಭಾರತ ಸರ್ಕಾರದ ಜನಗಣತಿ".
  2. "census data".
"https://kn.chped.com/w/index.php?title=ತಿಪಟೂರು&oldid=1230308" ಇಂದ ಪಡೆಯಲ್ಪಟ್ಟಿದೆ